ಬೆಂಗಳೂರು, ಮೇ 8: ವಿಶೇಷ ತೀವ್ರ ಪರಿಷ್ಕರಣೆಯು ಮತದಾರರನ್ನು ಹೊರನೂಕುವ, ಅಪ್ರಜಾಸತ್ತಾತ್ಮಕ, ಅವೈಜ್ಞಾನಿಕ ಪ್ರಕ್ರಿಯೆ. ಈ ಪ್ರಕ್ರಿಯೆಯಿಂದ ರಾಜ್ಯದ ಮತದಾರರ ಹಕ್ಕನ್ನು ರಕ್ಷಿಸಿಕೊಳ್ಳಲು ತುರ್ತಾಗಿ ಕೆಲವು ತಿರ್ಮಾನಗಳನ್ನು ಸರಕಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಇತರರೊಂದಿಗೆ ಚರ್ಚೆ ನಡೆಸಿದ್ದಾರೆ.
ಶುಕ್ರವಾರ ನಗರದ ಕೃಷ್ಣಾದಲ್ಲಿ ನಡೆದ ಚರ್ಚೆಯಲ್ಲಿ ರಾಜಕೀಯ ವಿಶ್ಲೇಷಕರಾದ ಪರಕಾಲ ಪ್ರಭಾಕರ್, ನಿಖಿಲ್ ಡೆ, ಮತದಾನ ಹಕ್ಕು ಚಳವಳಿಯ ಥಾಮಸ್ ಫ್ರಾಂಕೋ, ಎದ್ದೇಳು ಕರ್ನಾಟಕದ ತಾರಾರಾವ್, ನೂರ್ ಶ್ರೀಧರ್, ಮಾಜಿ ಸಚಿವೆ ಬಿ.ಟಿ.ಲಲಿತನಾಯ್ಕ್, ಹೋರಾಟಗಾರರಾದ ಎನ್.ವೆಂಕಟೇಶ, ಯೂಸುಫ್ ಕನ್ನಿ, ಅರುಣ್ ಲೂಯಿಸ್, ಬಡಗಲಪುರ ನಾಗೇಂದ್ರ, ವಿನಯ್ ಶ್ರೀನಿವಾಸ್, ಕೆ.ವಿ.ಭಟ್, ಕೆ.ಎಲ್.ಅಶೋಕ್, ಬಿ.ಅಮ್ಜದ್, ಮಹಂತೇಶ್, ತಾಹೀರ್ ಹುಸೇನ್, ಶ್ರೀರಾಂ, ಅಬ್ದುಲ್ ಮಜೀದ್, ಅಮ್ಜದ್ ಪಾಷಾ, ಅಂಬಣ್ಣ ಆರೋಲಿಕರ್, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭಾರತದ ಚುನಾವಣಾ ಆಯೋಗವು 2025ರ ಜೂನ್ನಿಂದ ಎಸ್ಐಆರ್ ಅನ್ನು ಪರಿಚಯಿಸದ ಮತ್ತು ಅದನ್ನು ಅನುಷ್ಠಾನಗೊಳಿಸಿದ ರೀತಿಯಿಂದಾಗಿ ಅದು ತನ್ನ ಎಲ್ಲ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಸಂವಿಧಾನದ ಆರ್ಟಿಕಲ್ 324ರ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಅದೊಂದು ರಾಜಕೀಯವಾಗಿ ಪಕ್ಷಪಾತಿಯಾದ ಸಂಸ್ಥೆ ಎಂಬುದು ಬಟಾಬಯಲಾಗಿದೆ. ಬಹುತೇಕ ಜನರು ಸುಪ್ರೀಂಕೋರ್ಟ್ ಮೇಲೂ ತೀವ್ರ ನಿರಾಸೆ ಹೊಂದಿದ್ದಾರೆ. ದೇಶದ ಮತದಾರರ ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಅದು ವಿಫಲವಾಗಿದೆ ಎಂದು ಹೋರಾಟಗಾರರು ವಿವರಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯನ್ನು ಇದೇ ಸ್ವರೂಪದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಮತ್ತು ಅದನ್ನು ಕೂಡಲೇ ನಿಲ್ಲಿಸಬೇಕು. ಇದುವರೆಗೆ ಕೈಗೊಳ್ಳಲಾದ ಪ್ರಕ್ರಿಯೆಯನ್ನು ಸಂಪೂರ್ವಾಗಿ ಪರಿಶೀಲಿಸಬೇಕು. ಎಸ್ಐಆರ್ನ ಸಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು. ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕನ್ನು ಗ್ಯಾರಂಟಿ ಮಾಡುವ, ಮತದಾರರ ಸೇರ್ಪಡೆಯನ್ನು ಸುಲಲಿತಗೊಳಿಸುವ ರೀತಿಯಲ್ಲಿ, ಪ್ರತಿಯೊಂದು ಹಂತವೂ ಪಾರದರ್ಶಕವಾಗಿರುವ ರೀತಿಯಲ್ಲಿ ನಿಯಮಗಳನ್ನು ಪುನರ್ ರೂಪಿಸಿಯೇ ಜಾರಿಗೆ ತರಬೇಕು ಎಂಬ ಆಗ್ರಹವನ್ನು ಸರಕಾರ ಮುಂದಿಡಬೇಕು ಎಂದು ಹೇಳಿದರು.
ಎಸ್ಐಆರ್ ಒಂದು ವೇಳೆ ಜಾರಿಗೆ ಬರುವುದಾದರೂ, ಪ್ರಕ್ರಿಯೆಯ ಕಾಲಾವಧಿಯನ್ನು 3 ತಿಂಗಳ ಬದಲು 6 ತಿಂಗಳಿಗೆ ವಿಸ್ತರಿಸಬೇಕು. ತರಾತುರಿಯ ಪರಿಷ್ಕರಣೆ ನಡೆಸಬಾರದು. ಮತದಾರರ ನೆರವಿಗೆ ಎಲ್ಲ ಗ್ರಾಮ ಪಂಚಾಯಿತಿ, ವಾರ್ಡುಗಳಲ್ಲಿ ಮತದಾರರ ನೆರವು ಕೇಂದ್ರಗಳನ್ನು ಸ್ಥಾಪಿಸಬೇಕು. ಸೂಕ್ತ ದಾಖಲೆ ಇಲ್ಲದ ಜನರಿಗೆ, ದಾಖಲೆ ಒದಗಿಸುವ ಕೆಲಸದಲ್ಲಿ ಸರಕಾರ ಜನರಿಗೆ ನೆರವಾಗಬೇಕು. ಮತದಾರರ ಕರಡು ಪಟ್ಟಿ ತಯಾರಾದ ನಂತರ ಚುನಾವಣಾ ಆಯೋಗದ ಮ್ಯಾನ್ಯುಯಲ್ನಲ್ಲಿ ಸೂಚಿಸಿರುವಂತೆ ಕಡ್ಡಾಯವಾಗಿ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ಕರೆದು, ಕರಡು ಪಟ್ಟಿಯನ್ನು ಮತ್ತು ಅದರಲ್ಲಿ ಬಂದಿರುವ ತಿದ್ದುಪಡಿಗಳನ್ನು ಜನರ ಮುಂದಿಟ್ಟು, ಮುಕ್ತ ಪರಿಶೀಲನೆಗೆ ಒಳಪಡಿಸಿದ ನಂತರವೇ ಅಂತಿಮಗೊಳಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಡಿಲೀಟ್ ಆದ ಮತದಾರರು ಮನವಿ ಸಲ್ಲಿಸಲು 6 ತಿಂಗಳ ಸಮಯವಕಾಶವನ್ನು ನೀಡಬೇಕು. ಕರ್ನಾಟಕ ಸ್ವಾವಲಂಬಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ವಿಚಾರವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದನ್ನು ಸಮರ್ಥ ರೀತಿಯಲ್ಲಿ ಕಾರ್ಯ ರೂಪಕ್ಕೆ ತರಬೇಕು. ಸೋಷಿಯಲ್ ಆಡಿಟಿಂಗ್ ಪದ್ಧತಿಯನ್ನು ಬಳಸಿ ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ಈ ನಾಲ್ಕು ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಕರ್ನಾಟಕ ತನ್ನ ಪ್ರತಿರೋಧವನ್ನು ಪರಿಣಾಮಕಾರಿಯಾಗಿ ದಾಖಲಿಸಬೇಕು ಮಾತ್ರವಲ್ಲ ದೇಶಕ್ಕೆ ಹೊಸ ಮಾದರಿಯನ್ನು ಕಟ್ಟಿಕೊಡಬೇಕು ಎಂದು ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದರು.
*ಸಮಿತಿಯ ಪರವಾಗಿ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ಪರಕಾಲ ಪ್ರಭಾಕರ್, ನಿಖಿಲ್ ಡೆ, ಥಾಮಸ್ ಫ್ರಾಂಕೋ, ಮತ್ತು ವಿನಯ್ ಶ್ರೀನಿವಾಸ್ ಅವರು ವಿವಿಧ ಕೋನಗಳಿಂದ SIR ನಿಂದ ಇರುವ ಅಪಾಯಗಳ ಬಗ್ಗೆ ಹಾಗೂ ಅದನ್ನು ತಡೆಯಲು ಸರ್ಕಾರದ ತೆಗೆದುಕೊಳ್ಳಲೇಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಹಾಗೂ ಕ್ಯಾಬಿನೆಟ್ ಸಚಿವರಿಗೆ ಮನವಿಕೆ ಮಾಡಿಕೊಟ್ಟರು.*
*ನಾಗರೀಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಮುಂದಿಟ್ಟ ಪ್ರಸ್ತಾಪಗಳ ಕುರಿತು ಸುಮಾರು 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಎಲ್ಲಾ ಎಂ ಎಲ್ ಎ ಗಳ ಹಾಗೂ ಡಿಫೀಟೆಡ್ ಎಂ ಎಲ್ ಎ ಗಳ ಸಭೆ ಕರೆದು ವಿಸ್ತೃತ ಸಭೆ ಕರೆಯುತ್ತೇವೆ. ಎಲ್ಲರ ಜೊತೆಯೂ ಸಮಾಲೋಚನೆ ನಡೆಸಿ, ನಂತರ ನಿಮ್ಮೊಟ್ಟಿಗೆ ಮತ್ತೊಮ್ಮೆ ಮಾತನಾಡುತ್ತೇವೆ” ಎಂದು ಹೇಳಿದರು.*
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions